*ಬಸವಣ್ಣವರ ವಿಚಾರ, ತತ್ತ್ವಗಳು ಅಂಬೇಡ್ಕರ ರಚಿತ ಸಂವಿಧಾನದಲ್ಲಿ ಕಾಣುತ್ತವೆ. ಬಸವ, ಅಂಬೇಡ್ಕರ ಅವರಲ್ಲಿ ವಿಚಾರ, ಪ್ರಸ್ತುತತೆಯಲ್ಲಿ ಸಾಮ್ಯತೆ ಇದೆ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ*
ಧಾರವಾಡ (ಕರ್ನಾಟಕ ವಾರ್ತೆ) ಏ.30: 12ನೇ ಶತಮಾನದ ಬಸವಣ್ಣನವರ ವಿಚಾರಧಾರೆಗಳು, ಸಾಮಾಜಿಕ ಸುಧಾರಣೆಗಳು ಅವರ ಅನುಭವ ಮಂಟಪ, ವಚನಗಳ ಮೂಲಕ ಜಾರಿಗೆ ಬಂದರೆ, ಬಸವಣ್ಣನವರ ಮಹಾನ ತತ್ತ್ವಗಳನ್ನು ಅನುಸರಿಸುವಂತೆ ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ಭಾರತಕ್ಕೆ ಸಂವಿಧಾನ ನೀಡಿದ್ದಾರೆ. ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ಲಿಂಗಸಮಾನತೆ ಅಂತಹ ಕ್ರಾಂತಿಕಾರ ವಿಚಾರಗಳನ್ನು ಅವಲೋಕಿಸಿದಾಗ ಇಬ್ಬರು ಮಹಾತ್ಮರಲ್ಲಿ ಸಾಮ್ಯತೆ ಕಾಣುತ್ತದೆ ಎಂದು ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಅವರು ಹೇಳಿದರು.
ಅವರು ಇಂದು ಸಂಜೆ ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಕರ್ನಾಟಕ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಬಸವಣ್ಣನವರು ಸಮಾನತೆ, ಲಿಂಗಸಮಾನತೆ, ಮಹಿಳಾ ಸ್ವಾತಂತ್ರ್ಯ ಸೇರಿದಂತೆ ಅನೇಕ ಸಾಮಾಜಿಕ ಸುಧಾರಣೆಗಳನ್ನು ಪ್ರತಿಪಾದಿಸಿದ್ದರು. ಡಾ.ಅಂಬೇಡ್ಕರ್ ಅವರು ಈ ಎಲ್ಲ ಅಂಶಗಳನ್ನು ಸಂವಿಧಾನದಲ್ಲಿ ಸೇರಿಸಿದ್ದಾರೆ. ಆದ್ದರಿಂದ ಇಬ್ಬರ ವಿಚಾರಗಳಲ್ಲೂ ಸಾಮ್ಯತೆ ಇದೆ ಎಂದು ಅವರು ಹೇಳಿದರು.
ಬಸವಣ್ಣನವರು ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದರು. ಅನುಭವ ಮಂಟಪದ ಮೂಲಕ ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಿದರು. ಕರ್ನಾಟಕದ ಇಂದಿನ ಪ್ರಗತಿ, ಅಭಿವೃದ್ಧಿಗೆ ಬಸವಣ್ಣನವರ ಕೊಡುಗೆ ಅಧಿಕವಾಗಿದೆ ಎಂದು ಸಚಿವರು ತಿಳಿಸಿದರು.
ಕನ್ನಡ ನಾಡಿನ ಇತಿಹಾಸವನ್ನು ನಾವು ಅವಲೋಕಿಸಿದಾಗ ಬಸವ ಪ್ರಣೀತವಾದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ನಾಡಿನ ಅಭಿವೃದ್ಧಿಗೆ ಅನ್ನ ಮತ್ತು ಅಕ್ಷರ ದಾಸೋಹ ಎರಡನ್ನು ನೀಡಿದೆ. ಈ ಪರಂಪರೆಯನ್ನು ನಾವು ಬೇರೆ ರಾಜ್ಯದಲ್ಲಿ ಕಾಣಲು ಸಾಧ್ಯವಾಗುವದಿಲ್ಲ. ಬಸವಣ್ಣನವರ ಉದಾರ ಚಿಂತನೆಗಳನ್ನು ನಾವು ಅಳವಡಿಸಿಕೊಳ್ಳಬೇಕು. ಅವರನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸಬಾರದು ಎಂದರು.
ಬಸವಣ್ಣನವರು ವಿಶ್ವಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ವಿಶ್ವಸಂಸ್ಥೆಯ ನಡಾವಳಿಯಲ್ಲೂ ಬಸವ ವಿಚಾರಗಳನ್ನು ನಾವು ಕಾಣಬಹುದು ಎಂದರು.
ಬಸವಣ್ಣನವರ ನಡೆ, ನುಡಿಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಣ್ಣನವರ ಬೋಧನೆಗಳನ್ನು ಸಮಕಾಲಿನ ಸಂಗತಿಗಳೊಂದಿಗೆ ಹೋಲಿಕೆ ಮಾಡಿ ವಿಶ್ಲೇಷಿಸಿ, ಅವರ ವಿಚಾರಗಳನ್ನು ಮನೆಮನೆಗೆ ಮುಟ್ಟಿಸುವ ಕೆಲಸವಾಗಬೇಕು
ಎಂದು ಸಚಿವ ಸಂತೋಷ ಲಾಡ ಅವರು ಹೇಳಿದರು.
ಮಾಜಿ ಶಾಸಕ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರು ಮಾತನಾಡಿ, ಬಸವಣ್ಣನವರ ಬದುಕು ನಮಗೆಲ್ಲ ಮಾದರಿ ಆಗಿದೆ. ಅವರ ಜೀವನ ಸಂದೇಶ ನಮಗೆ ದಾರಿ ದೀಪವಾಗಬೇಕು ಎಂದರು.
ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಢಾನದ ಅಧ್ಯಕ್ಷ ಪ್ರೊ. ವೀರಣ್ಣ ರಾಜೂರ ಅವರು ಮಾತನಾಡಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು.
ಧಾರವಾಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಪ್ರಾಧ್ಯಾಪಕ ಡಾ.ಗಿರೀಶ ದೇಸೂರ ಅವರು ಬಸವೇಶ್ವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ, ಧಾರವಾಡ ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ,
ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಿ.ಎಸ್.ಮೂಗನೂರಮಠ, ಧಾರವಾಡ ತಹಶಿಲ್ದಾರ ಡಿ.ಎಚ್.ಹೂಗಾರ, ಸಮಾಜ ಮುಖಂಡರಾದ
ಸಿದ್ರಾಮಣ್ಣ ನಡಕಟ್ಟಿ, ಎನ್.ಬಿ.ಗೊಲ್ಲನ್ನವರ ಇದ್ದರು.
ಸಂಗೀತ ವಿದ್ವಾಂಸ ಡಾ. ಕೈವಲ್ಯಕುಮಾರ ಗುರುವ ಅವರು ಸುಮುಧರ ವಚನಗಾಯನ ಕಾರ್ಯಕ್ರಮ ನಡೆಸಿಕೋಟ್ಟರು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು
ಕಾರ್ಯಕ್ರಮದಲ್ಲಿ ವಿವಿಧ ಪ್ರಮುಖರು, ಬಸವ ಅನುಯಾಯಿಗಳು, ಅಭಿಮಾನಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
************