ರುಡ್ ಸೆಟ್ ಸಂಸ್ಥೆ ಗಾಂಧಿನಗರ, ಧಾರವಾಡ
ಯುವಕರು ದೇಶದ ಆಸ್ತಿ, ಸ್ವಂತ ಉದ್ಯಮಿಯಾಗಿ -
ರಾಜಣ್ಣ ಕೊರವಿ
ಧಾರವಾಡ : ಕುಡಿತದ ದುಶ್ಚಟ ಕುಟುಂಬದ ನೆಮ್ಮದಿಯನ್ನಷ್ಟೇ ಕಸಿಯುವದಿಲ್ಲ, ಕುಟುಂಬದ ಬದುಕನ್ನೇ ಸರ್ವನಾಶ ಮಾಡುತ್ತದೆ. ಶ್ರೀ ಧರ್ಮಸ್ಥಳದ ಮಧ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಪಾನಮುಕ್ತರಾದ ನಿವೇಲ್ಲ ಮರುಹುಟ್ಟು ಪಡೆದಿದ್ದೀರಿ ತದನಂತರದಲ್ಲಿ ಈಗ ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆ ತರಬೇತಿ ಪಡೆದು ಸ್ವಂತ ಉದ್ಯಮಿಗಳಾಗಿ ಬದುಕನ್ನು ಕಟ್ಟಿಕೊಳ್ಳಿ ಎಂದು ಹು-ದಾ ಮಹಾ ನಗರ ಪಾಲಿಕೆ ಸದಸ್ಯ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ರಾಜಣ್ಣ ಕೊರವಿ ಹೇಳಿದರು. ಅವರು ಧಾರವಾಡ ಗಾಂಧಿನಗರ ರುಡ್ ಸೆಟ್ ಸಂಸ್ಥೆಯಲ್ಲಿ ಮುಕ್ತಾಯಗೊಂಡ ಶ್ರೀ ಧರ್ಮಸ್ಥಳದ ಮಧ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಪಾನಮುಕ್ತರಾದ ಯುವಕರಿಗೆ ಉಚಿತವಾಗಿ ಹಮ್ಮಿಕೊಂಡಿದ್ದ ಹೈನುಗಾರಿಕೆ ಮತ್ತು ಕುರಿಸಾಕಾಣಿಕೆ ತರಬೇತಿಯ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಮದ್ಯ ವ್ಯಸನಿಗಳಿಗೆ ಹೊಸ ಬದುಕನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜನ ಜಾಗೃತಿ ವೇದಿಕೆಯ ಮೂಲಕ ಕಲ್ಪಿಸಿಕೊಡುತ್ತಿದ್ದಾರೆ. ಯುವ ಜನಾಂಗ ಈ ದೇಶದ ಆಸ್ತಿ ಅದರ ಸದ್ಬಳಕೆಯೂ ಮುಖ್ಯ ಆದುದರಿಂದ ಕೃಷಿ ಪೂರಕ ಉದ್ಯೋಗಗಳಾದ ಹೈನುಗಾರಿಕೆ ಹಾಗೂ ಕುರಿ ಸಾಕಾಣಿಕೆ ಅತ್ಯಂತ ಸೂಕ್ತವಾದ ಕೆಲಸಗಳಾಗಿವೆ ಎಂದು ಹೇಳಿ ಎಲ್ಲರಿಗೂ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು.
ಸಮಾರೋಪದ ಅತಿಥಿಗಳಾದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧಾರವಾಡದ ನಿರ್ದೇಶಕ ಪ್ರದೀಪ ಶೆಟ್ಟಿ ಮಾತನಾಡಿ ಯುವ ಸಮೂಹ ಕುಡಿತದ ವ್ಯಸನಕ್ಕೆ ಒಳಗಾಗಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವ್ಯಸನ ಮುಕ್ತಗೊಳಿಸಿ ಹಾಗೂ ಅಂಥವರಿಗೆ ವಿವಿಧ ಆಸಕ್ತದಾಯಕ ಸ್ವ ಉದ್ಯಮ ತರಬೇತಿಯನ್ನು ಕೊಡುವದರ ಮೂಲಕ ಅವರನ್ನೂ ಸಮಾಜದ ಮುಖ್ಯವಾಹಿನಿಗೆ ತರಲಾಗುತ್ತದೆ. ಕೃಷಿ ಕುಟುಂಬ ಹಿನ್ನಲೆ ಹೊಂದಿದ್ದರೂ ವೈಜ್ಞಾನಿಕವಾಗಿ ಹೈನುಗಾರಿಕೆ ಹಾಗೂ ಕುರಿ ಸಾಕಾಣಿಕೆ ಉದ್ಯಮವನ್ನು ನಡೆಸಲು ತರಬೇತಿ ಅವಶ್ಯವಾಗಿದೆ ಎಂದು ಹೇಳುತ್ತಾ ಶುಭ ಹಾರೈಸಿದರು.
ವೇದಿಕೆಯಲ್ಲಿ ರಮೇಶ ತೊರವಿ ಹಾಗೂ ಮೇದಪ್ಪ ಉಪಸ್ಥಿತರಿದ್ದರು.
ರುಡ್ಸೆಟ್ ಸಂಸ್ಥೆಯ ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ಒಟ್ಟು 31 ಜನ ಪಾನಮುಕ್ತ ಯುವಕರು ತರಬೇತಿಯಲ್ಲಿ ಭಾಗವಹಿಸಿದ್ದರು.
ರುಡ್ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಬಸವರಾಜ ಸನಪಾ ಕಾರ್ಯಕ್ರಮ ನಿರೂಪಿಸಿದರು, ಇನ್ನೋರ್ವ ಹಿರಿಯ ಉಪನ್ಯಾಸಕ ಚನ್ನಪ್ಪ ದೇವಗಿರಿ ಎಲ್ಲರನ್ನು ಸ್ವಾಗತಿಸಿದರು. ಧರ್ಮಸ್ಥಳ ಜನಜಾಗೃತ ವೇದಿಕೆಯ ಯೋಜನಾಧಿಕಾರಿ ಭಾಸ್ಕರ್ ಎನ್. ವಂದಿಸಿದರು.