ಅನಂತ ಹರಿಹರ ಸಂಸ್ಮರಣೆಯಲ್ಲಿ ಮೂರು ದಿನಗಳ ಸಂಗೀತ ಸಮ್ಮೇಳನ
23 ರಿಂದ ಅನಂತ ಸ್ವರ ನಮನ’ ಸಂಗೀತೋತ್ಸವ.
ಧಾರವಾಡ: ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಲೋಕದಲ್ಲಿ ಕಲಾವಿದರು ಹಾಗೂ ಶ್ರೋತೃವರ್ಗದ ಕೊಂಡಿಯಾದವರು ಅನಂತ ಹರಿಹರ ಅವರು. ಅನೇಕ ಯುವ ಕಲಾವಿದರಿಗೆ ಸ್ಫೂರ್ತಿಯನ್ನು ತುಂಬಿದವರು, ವೇದಿಕೆಗಳನ್ನೊದಗಿಸಿದ ಯಶಸ್ವಿ ಸಂಘಟಕ, ಸಂಸ್ಕೃತಿಯ ರಾಯಭಾರಿಯಾಗಿ ಎಲ್ಲರ ಮನದಲ್ಲಿ ವಿಶೇಷ ಛಾಪನ್ನು ಮೂಡಿಸಿದವರು ‘ಧಾರವಾಡ ಸಂಗೀತ’ದ ಪರಿಚಾರಕ ಅನಂತ ಹರಿಹರ. ಅವರಿಗೆ ಧಾರವಾಡದ ಯುವ-ಪ್ರಬುದ್ಧ ಕಲಾವಿದರು ಮೂರು ದಿನ ನಡೆಯುವ ಸಂಗೀತೋತ್ಸವದ ಮೂಲಕ ನಮನ ಸಲ್ಲಿಸಲಿದ್ದಾರೆ. ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ಪ್ರೇರಿತ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳ ಜಂಟಿಯಾಗಿ ‘ಅನಂತ ಸ್ವರ ನಮನ’ ಮೂರು ದಿನಗಳ ಈ ಸಂಗೀತೋತ್ಸವವನ್ನು ಆಯೋಜಿಸಿವೆ.
ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಭಾಭವನದಲ್ಲಿ ಆ. 23 ,24 ಹಾಗೂ 25 ರಂದು ಪ್ರತಿದಿನ ಸಂಜೆ ಗಾಯನ-ವಾದನಗಳ ನಿನಾದ ರಿಂಗಣಿಸಲಿದೆ. ಈ ಸಂಗೀತೋತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರವಾಡ, ಬೆಂಗಳೂರಿನ ನಿತೀನ ಢವಳೆ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಹಾಗೂ ಕ್ಯಾನರಾ ಬ್ಯಾಂಕ್ ಕೈಜೋಡಿಸಿವೆ.
ಆ. 23ರಂದು ಸಂಜೆ 5 ಗಂಟೆಗೆ ಸಂಗೀತೋತ್ಸವದ ಉದ್ಘಾಟನಾ ಸಮಾರಂಭ ಜರುಗಲಿದೆ. ಖ್ಯಾತನಾಮ ಕಲಾವಿದರಾದ ಪದ್ಮಶ್ರೀ ಎಂ. ವೆಂಕಟೇಶಕುಮಾರ, ಪಂ. ಗಣಪತಿ ಭಟ್ ಹಾಸಣಗಿ, ಪಂ. ಶ್ರೀನಿವಾಸ ಜೋಶಿ, ಪಂ. ಕೈವಲ್ಯಕುಮಾರ ಗುರವ, ಶಾಸಕ ಅರವಿಂದ ಬೆಲ್ಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ಚೆನ್ನೂರ ಹಾಗೂ ಕ್ಷಮತಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ. 25 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಹ್ಲಾದ ಜೋಶಿ, ಆಹಾರ ಮತ್ತು ಸರಬರಾಜು ಹಾಗೂ ನವೀಕರಿಸಬಹುದಾದ ಇಂಧನ ಸಚಿವರು, ಭಾರತ ಸರಕಾರ, ಈರೇಶ ಬ ಅಂಚಟಗೇರಿ, ಪಂ. ಶ್ರೀಪಾದ ಹೆಗಡೆ ಕಂಪ್ಲಿ ಹಾಗೂ ಹಿರಿಯ ವಯೋಲಿನ್ ವಾದಕ ಪಂ. ಬಿ.ಎಸ್. ಮಠ ಅವರು ಭಾಗವಹಿಸಲಿದ್ದಾರೆ
ಆ. 23 ರಂದು ಹುಬ್ಬಳ್ಳಿಯ ಸುಜಯೀಂದ್ರ ಕುಲಕರ್ಣಿ, ಹುಬ್ಬಳ್ಳಿ-ನವನಗರದ ಶುಭಾಂಗಿ ಜಾಧವ, ಧಾರವಾಡದ ಡಾ. ವಿಜಯಕುಮಾರ ಪಾಟೀಲ ಅವರಿಂದ ಗಾನಸುಧೆ ಹರಿದುಬರಲಿದೆ. ಆ. 24 ರಂದು ಹುಬ್ಬಳ್ಳಿಯ ಪಂ. ಕೃಷ್ಣೇಂದ್ರ ವಾಡೀಕರ ಹಾಗೂ ಧಾರವಾಡದ ಅಯ್ಯಪ್ಪಯ್ಯ ಹಲಗಲಿಮಠ ಅವರ ಗಾಯನ ಬೆಂಗಳೂರಿನ ಸರಫರಾಜ ಖಾನ್ ಅವರ ಸಾರಂಗಿ ವಾದನ, ಹಾಗೂ ವೀಣಾ ಮಠ ಅವರಿಂದ ವಯೋಲಿನ್ ವಾದನ ಝೇಂಕರಿಸಲಿದೆ. ಆ. 25 ರಂದು ಗಾಯನ ಹಾಗೂ ಸಿತಾರ ವಾದನಗಳ ನಿನಾದ ಹರಿದುಬರಲಿದೆ. ಹುಬ್ಬಳ್ಳಿ ನಿಖಿಲ್ ಜೋಶಿ, ಧಾರವಾಡದ ಉ. ಮೊಹಸೀನ್ ಖಾನ್ ಅವರಿಂದ ಸಿತಾರವಾದನ ಹಾಗೂ ಬೆಂಗಳೂರಿನ ಶಿವಾನಿ ಮಿರಜಕರ ಜೈನ್ ಹಾಗೂ ಧಾರವಾಡದ ಕುಮಾರ ಮರಡೂರ ಅವರಿಂದ ಗಾನಸುಧೆ ರಿಂಗಣಿಸಲಿದೆ.
ಮೂರು ದಿನಗಳ ಈ ಸಂಗೀತೋತ್ಸವದಲ್ಲಿ ಬೆಂಗಳೂರಿನ ಕೇಶವ ಜೋಶಿ, ಧಾರವಾಡದ ಉ. ನಿಸ್ಸಾರ ಅಹ್ಮದ, ಶ್ರೀಧರ ಮಾಂಡ್ರೆ, ಡಾ. ಶ್ರೀಹರಿ ದಿಗ್ಗಾವಿ, ಜಯತೀರ್ಥ ಪಂಚಮುಖಿ, ಅಕ್ಷಯ ಭಟ್ಟ, ಹೇಮಂತ ಜೋಶಿ ತಬಲಾ ಸಾಥ್ ನೀಡಲಿದ್ದಾರೆ. ಸತೀಶ ಭಟ್ಟ ಹೆಗ್ಗಾರ, ಸಾರಂಗ ಕುಲಕರ್ಣಿ, ಬಸವರಾಜ ಹಿರೇಮಠ, ವಿನೋದ ಪಾಟೀಲ ಅವರು ಹಾರ್ಮೋನಿಯಂ ಸಾಥ್ ಸಂಗತ್ ಮಾಡಲಿದ್ದಾರೆ.