ರಾಷ್ಟ್ರೀಯ ಪಕ್ಷಗಳ ವಿರುದ್ಧ ಕಿಡಿ; ವಿಧಾನಸೌಧದಲ್ಲಿ ಚಂಬಲ್ ಕಣಿವೆ ದರೋಡೆಕೋರರು ಇದ್ದಾರೆಂದು ಮಾಜಿ ಸಿಎಂ ಆಕ್ರೋಶ* ಜೆಡಿಎಸ್‌ ಜನತಾ ಮಿತ್ರ ಸಮಾವೇಶ*

*ಜೆಡಿಎಸ್‌ ಜನತಾ ಮಿತ್ರ ಸಮಾವೇಶ*

*ಬೆಂಗಳೂರು ನಗರ ಅಭಿವೃದ್ಧಿಗೆ ಕನಸು ತೆರೆದಿಟ್ಟ ಹೆಚ್.ಡಿ.ಕುಮಾರಸ್ವಾಮಿ*
*ರಾಷ್ಟ್ರೀಯ ಪಕ್ಷಗಳ ವಿರುದ್ಧ ಕಿಡಿ; ವಿಧಾನಸೌಧದಲ್ಲಿ ಚಂಬಲ್ ಕಣಿವೆ ದರೋಡೆಕೋರರು ಇದ್ದಾರೆಂದು ಮಾಜಿ ಸಿಎಂ ಆಕ್ರೋಶ* 
**** 
ಬೆಂಗಳೂರು: ಚಂಬಲ್ ಕಣಿವೆಯ ದರೋಡೆಕೋರರು ವಿಧಾನಸೌಧದಲ್ಲಿ ಸೇರಿಕೊಂಡಿದ್ದಾರೆ. ಅವರನ್ನು ಓಡಿಸುವ ಕೆಲಸ ಮಾಡಬೇಕಿದೆ. ಹಾಗಾಗಿ, ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾದಳಕ್ಕೆ ಒಂದು ಅವಕಾಶ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರು ನಿವಾಸಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಜೆಡಿಎಸ್‍ ಪಕ್ಷದವತಿಯಿಂದ ಇಂದು ಹಮ್ಮಿಕೊಂಡಿದ್ದ ʼಜನತಾ ಮಿತ್ರʼ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವ ಮಟ್ಟದಲ್ಲಿ ಖ್ಯಾತಿಯಾಗಿದ್ದ ಬೆಂಗಳೂರು ನಗರವನ್ನು ರಾಷ್ಟ್ರೀಯ ಪಕ್ಷಗಳು ಸಂಪೂರ್ಣವಾಗಿ ಹಾಳು‌ ಮಾಡಿದ್ದಾರೆ. ಅದನ್ನು ಸರಿ ಮಾಡಲು ನಮಗೆ ಅಧಿಕಾರ ನೀಡಿ ಜನತೆಯನ್ನು ಕೈ ಮುಗಿದು ಕೋರಿದರು.
ಜೆಡಿಎಸ್‍ ಪಕ್ಷ  ಅಧಿಕಾರಕ್ಕೆ ಬರಬೇಕು. ಬಡವರಿಗೆ ನೆರವಾಗಬೇಕೆಂಬ ಹಂಬಲದಿಂದ ದೇವೇಗೌಡರು ಆರೋಗ್ಯ ಸಮಸ್ಯೆ ಇದ್ದರೂ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅವರ ಆಶಯ ದೊಡ್ಡದು, ಅವರ ಉದ್ದೇಶ ದೊಡ್ಡದು. ಜನರಿಗೆ ಏನಾದರೂ ಸೇವೆ ಮಾಡಲೇಬೇಕೆಂಬ ಹಂಬಲ ಅವರದ್ದು. ಹೀಗಾಗಿ ನೀವು ಬೆಂಬಲ ನೀಡಿ, ನಿಮ್ಮನ್ನು ನಂಬಿದ್ದೇವೆ ನಾವು ಎಂದು ಜನರನ್ನು ಉದ್ದೇಶಿಸಿ ಹೇಳಿದರು ಮಾಜಿ ಮುಖ್ಯಮಂತ್ರಿಗಳು.
,
ಕನ್ನಡ, ಕನ್ನಡಿಗರಿಗೆ ಸ್ವಾಭಿಮಾನ‌ ತಂದುಕೊಟ್ಟವರು ಹೆಚ್.ಡಿ.ದೇವೇಗೌಡರು. ಹಲವು ತಿಂಗಳ ಬಳಿಕ ಮೊದಲ ಬಾರಿಗೆ ಈ ಸಮಾವೇಶಕ್ಕೆ ಮೂಲಕ ಹೋರಾಟಕ್ಕೆ ಸ್ಫೂರ್ತಿ ತಂದುಕೊಟ್ಟಿದ್ದಾರೆ. ಬೆಂಗಳೂರಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ತರಲು ಜೆಡಿಎಸ್ ಅಧಿಕಾರಕ್ಕೆ ಬರಬೇಕಿದೆ. ನಾಡಿನ ಆರೂವರೆ ಕೋಟಿ ಜನರ ಆಶೀರ್ವಾದದೊಂದಿಗೆ ಅಧಿಕಾರಕ್ಕೆ ಬರಬೇಕೆಂಬುದು ನಮ್ಮ ಅಪೇಕ್ಷೆ. ಅದರಂತೆ ಜನತಾ ಜಲಧಾರೆ, ಜನತಾಮಿತ್ರ ಕಾರ್ಯಕ್ರಮ ರೂಪಿಸಿದ್ದೆವು. ಜನತಾಮಿತ್ರ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಒಂದು‌ ಲಕ್ಷ ಜನ ನಗರವಾಸಿಗಳು ಪತ್ರಗಳು, ಆನ್ ಲೈನ್ ಮೂಲಕ ಸಮಸ್ಯೆಗಳು ಹಾಗೂ ಪರಿಹಾರಗಳ ಬಗ್ಗೆ ಅಭಿಪ್ರಾಯ ಕಳುಹಿಸಿದ್ದಾರೆ. ತಮಗೆ ಬೇಕಿರುವ ಸರಕಾರ, ಕಾರ್ಯಕ್ರಮಗಳ ಬಗ್ಗೆ ನಮಗೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.
 
ಜೆಡಿಎಸ್‌ ಅಧಿಕಾರದಲ್ಲಿದ್ದಾಗ ಮಾತ್ರ ಬೆಂಗಳೂರಿಗೆ ಶಾಶ್ವತ ಯೋಜನೆಗಳು ಬರುತ್ತಿವೆ. ದೇವೆಗೌಡರು ಅಧಿಕಾರದಲ್ಲಿದ್ದಾಗ ಕೆರೆ ಕಟ್ಟೆಗಳ ರಕ್ಷಣೆಗೆ ಕ್ರಮ ಕೈಗೊಂಡಿದ್ದರು. ಆದರೆ, ಇಂದು ಅಭಿವೃದ್ಧಿ ನೆಪದಲ್ಲಿ ಕೆರೆಕಟ್ಟೆಗಳನ್ನು ಮುಚ್ಚಿ ಬಡಾವಣೆಗಳನ್ನು ಮಾಡಿದ್ದಾರೆ. ಪರಿಣಾಮವಾಗಿ, ಇಂದು ಅನೇಕ ಬಡಾವಣೆಗಳು ಜಲಾವೃತವಾಗಿ ಜನ ಪರಿತಪಿಸುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳ ಕೈನಲ್ಲಿ ಬಿಬಿಎಂಪಿ ಇತ್ತು. ಅಭಿವೃದ್ಧಿಗಿಂತ ತೆರಿಗೆ ಹಣವನ್ನು ಲೂಟಿ ಮಾಡಿದ್ದರ ಬಗ್ಗೆ ಜನ ಹೆಚ್ಚು ಚರ್ಚೆ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಪಕ್ಷಿಗಳ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ವಾಗ್ದಾಳಿ ನಡೆಸಿದರು.

ನಾನು ಹದಿನಾಲ್ಕು ತಿಂಗಳು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮಾಡಲು ಅವಕಾಶ ಸಿಗಲಿಲ್ಲ. ಭ್ರಷ್ಟಾರಹಿತ ಸರ್ಕಾರ ಕೊಡುವ ಹೋರಾಟ ನಡೆಸಿದ್ದೇವೆ. ನಾವು ಅಧಿಕಾರದಲ್ಲಿ ಇದ್ದಾಗ ಅನೇಕ ಅಭಿವೃದ್ಧಿ ಕಾರ್ಯಕ್ರಮ ಕೊಟ್ಟಿದ್ದೇವೆ. ದೇವೇಗೌಡರು ಸಿಎಂ ಆಗಿದ್ಧಾಗ  ಸಿರ್ಸಿ ಫ್ಲೈ ಓವರ್ ಕೊಟ್ಟಿದ್ದಾರೆ. ಕಾವೇರಿ ನದಿ ನೀರು ಪಡೆಯಲು ಕೇಂದ್ರ ಸರ್ಕಾರದ ಮುಂದೆ ಅರ್ಜಿ ಹಾಕಿತ್ತು ನಮ್ಮ ರಾಜ್ಯ. ಆದರೆ ತಮಿಳುನಾಡಿಗೆ ಮಣಿದು ಕೇಂದ್ರದಲ್ಲಿ ಇದ್ದ ಕಾಂಗ್ರೆಸ್ ಸರ್ಕಾರ ಒಪ್ಪಲಿಲ್ಲ. ಆದರೆ ದೇವೇಗೌಡರು ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಾಗ ಬೆಂಗಳೂರಿಗೆ ಕುಡಿಯುವ ನೀರು ಕೊಟ್ಟರು. ೯ ಟಿಂಎಸಿ ನೀರು ನಗರಕ್ಕೆ ದೊರಕಿಸಿಕೊಟ್ಟರು. 90 ಎಕರೆ ರಕ್ಷಣಾ ಇಲಾಖೆಯ ಜಾಗವನ್ನು ಬೆಂಗಳೂರು ಅಭಿವೃದ್ಧಿಗೆ ಕೊಟ್ಟರು. ಅವರು ಪ್ರಧಾನಿಯಾಗಿದ್ದಾಗ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ರೆವಿನ್ಯೂ ನಿವಾಸಿಗಳಿಗೆ ಹಕ್ಕು ಪತ್ರ ಕೊಟ್ಟಿದ್ದು ಕೂಡ ದೇವೇಗೌಡರೇ ಎಂದು ಕುಮಾರಸ್ವಾಮಿ ನುಡಿದರು.

ಕೆಂಪೇಗೌಡರು‌ ಕಟ್ಟಿದ ನಗರಕ್ಕೆ ಹೆಸರು ತಂದಿದ್ದು ಯಾರು ಅಂತ ಜನರು ಯೋಚಿಸಬೇಕಿದೆ. ನಾಗರೀಕರ ಸೌಕರ್ಯಕ್ಕಾಗಿ ನಮ್ಮ ಮೆಟ್ರೋ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದು ನಾನು ಸಿಎಂ ಆಗಿದ್ದ ಕಾಲದಲ್ಲಿ. ಕೇಂದ್ರದ ಯೋಜನೆಯಡಿ 25 ಸಾವಿರ ಕೋಟಿ ರೂ. ಬೆಂಗಳೂರು ಹಾಗೂ ಮೈಸೂರು ನಗರದ ಅಭಿವೃದ್ಧಿಗೆ ಕೊಡಲಾಗಿತ್ತು. ಹೊರವರ್ತುಲ ರಿಂಗ್ ರಸ್ತೆಗೆ ಒಪ್ಪಿಗೆ ನೀಡಲಾಗಿತ್ತು ಎಂದು ತಮ್ಮ ಮತ್ತು ದೇವೇಗೌಡರ ಕಾಲದ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಅವರು ಎಳೆ ಎಳೆಯಾಗಿ ಬಿಚ್ಚಿಟ್ಟರು.
*ರಾಜಕಾಲುವೆಗಳನ್ನು ನುಂಗಿದ ರಾಷ್ಟ್ರೀಯ ಪಕ್ಷಗಳು:*

ಬೆಂಗಳೂರಿನ ರಾಜಕಾಲುವೆ ಒತ್ತುವರಿಗೆ ಮೂಲ ಪುರುಷರು ಯಾರು ಎಂದರೆ; ಈ ಎರಡೂ ರಾಷ್ಟ್ರೀಯ ಪಕ್ಷಗಳು. ಕೆಲ ದಿನಗಳ ಹಿಂದೆ ಬುಲ್ಡೋಜರ್ ಬಿಟ್ಟು ಬಡವರ ಮನೆ ಹಾಗೂ ಅಲ್ಲೊಂದು ಇಲ್ಲೊಂದು ಮನೆ, ಕಟ್ಟಡ ಒಡೆದರು. ಶ್ರೀಮಂತರಿಗೆ ಮಾತ್ರ ನೋಟಿಸ್ ಕೊಟ್ಟು ಸುಮ್ಮನಾದರು. ಇದು ಬಿಜೆಪಿ ಸರಕಾರದ ವರಸೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಯೋಜನೆ ಮಾಡದೆ, ರಸ್ತೆ ಮಾಡದೇ ಹಣ ದೋಚುತ್ತಿದ್ದಾರೆ. ಒಂದು ಕಡೆ ನಿರುದ್ಯೋಗ, ಜಾತಿ ವೈಮನಸ್ಯನ್ನು ತರುತ್ತಿದ್ದಾರೆ. ಇದರಿಂದ ನೀವು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ನೀವು ಕೊಟ್ಟ ಹಣದಿಂದ ನಿಮಗೆ ಆ ಹಣ ಕೊಟ್ಟು ವೋಟ್ ಪಡೆದು ಅಧಿಕಾರಕ್ಕೆ ಬರುತ್ತಾರೆ. ದಾಸರಹಳ್ಳಿ ಶಾಸಕ ಮಂಜುನಾಥ್ ಅವರು ಮಳೆ ಸಂದರ್ಭದಲ್ಲಿ ವಾರ್ ರೂಂ ನಲ್ಲಿ ಇದ್ದು ಜನರ ಸಮಸ್ಯೆ ಆಲಿಸಿದರು. ಬೇರೆ ಯಾವ ಪಕ್ಷದ ಶಾಸಕರು ಈ ಕೆಲಸ ಮಾಡಿದ್ರೂ ನೀವೇ ಯೋಚನೆ ಮಾಡಿ. ಬೇರೆ ಜಿಲ್ಲೆಗಳಿಂದ ಬಂದಿರುವ ಕೂಲಿ ಕಾರ್ಮಿಕರಿಗೆ ಮನೆ ಇಲ್ಲ ಎಂದು ಕಿಡಿಕಾರಿದರು.
*ಕಾಂಗ್ರೆಸ್ ವಿರುದ್ಧ ವಾಗ್ದಾಳಿ:*

ಒಂದು ಬಡವರ ವರ್ಗ ಮತ್ತು ಶ್ರೀಮಂತರ ವರ್ಗ ಇದೆ ಎಂದು ಭಾರತ್ ಜೋಡೋ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. 45 ವರ್ಷ ಆಳ್ವಿಕೆ ಮಾಡಿದವರು ಎಲ್ಲರನ್ನು ಒಂದೇ ರೀತಿ ನೋಡಿದ್ದಾರಾ? ಈಗ ಎರಡು ವರ್ಗಗಳು ಅವರಿಗೆ ನೆನಪಿಗೆ ಬಂದಿವೆ ಎಂದು ಮಾಜಿ ಮುಖ್ಯಮಂತ್ರಿಗಳು ವಾಗ್ದಾಳಿ ನಡೆಸಿದರು.

ಎರಡು ರಾಷ್ಟ್ರೀಯ ಪಕ್ಷಗಳ ಭ್ರಷ್ಟಾಚಾರದ ಬಗ್ಗೆ ಈಗ ಚರ್ಚೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿಯ 40% ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಇಂಧನ ಇಲಾಖೆ ಭ್ರಷ್ಟಾಚಾರ ಬಗ್ಗೆ ಈಗ ತನಿಖೆ ಮಾಡುತ್ತೇವೆ ಎಂದು ಬಿಜೆಪಿ ಸರಕಾರ ಹೇಳುತ್ತಿದೆ. ಈ ಹಿಂದೆಯೇ ನಾನು ಸದನದಲ್ಲಿ ಮಾತನಾಡಿದ್ದೆ. ಬೆಂಗಳೂರನ್ನು ಲೂಟಿ ಮಾಡುವ ಪಕ್ಷಕ್ಕೆ ಇನ್ನೂ ಎಷ್ಟು ದಿನ ಆಶೀರ್ವಾದ ಕೊಡುತ್ತೀರಿ? ಎಂದು ಪ್ರಶ್ನೆ ಮಾಡಿದ ಹೆಚ್ಡಿಕೆ; ತೆಲಂಗಾಣದಲ್ಲಿ ಕೃಷಿ ಪಂಪುಸೆಟ್ಟುಗಳಿಗೆ ದಿನದ 24 ಗಂಟೆ ಗುಣಮಟ್ಟದ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ, ಇಲ್ಲಿ 7 ಗಂಟೆ ಕೊಡುತ್ತೇವೆ ಎಂದು ಹೇಳುತ್ತಾ. 3 ಗಂಟೆಗೆ ಮಾತ್ರ ಕೊಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಮಗೆ ಕೋಮು ಗಲಭೆ ಬೇಡ.‌ ಕರಾವಳಿ ಭಾಗ ಕೋಮು ದಳ್ಳುರಿಯಿಂದ ಬೇಯುತ್ತಿದೆ. ರಾಜಕೀಯದ ತೆವಲಿಗೆ ಬಡವರ ಮಕ್ಕಳು ಸಾಯುತ್ತಿದ್ದಾರೆ. ಬೆಂಗಳೂರು ನಗರ ಮತ್ತು ರಾಜ್ಯಕ್ಕೆ ಅಫೀಮು, ಗಾಂಜಾ ಸೇರಿ ಮಾದಕ ವಸ್ತುಗಳೆಲ್ಲ ಎಲ್ಲಿಂದ ಬರುತ್ತಿವೆ? ಗುಜರಾತ್‌ ಬಂದರುಗಳ ಮೂಲಕ ಇಡೀ ದೇಶಕ್ಕೆ ಪೂರೈಕೆ ಆಗುತ್ತಿವೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.
 
ಸುಳ್ಳು ಅಪಪ್ರಚಾರ ಮುಖಾಂತರ ನಮ್ಮ ನಡುವೆ ಮನಸ್ತಾಪ ತರಲಾಗುತ್ತಿದೆ. ಇಂಥಹವನ್ನು ಧಿಕ್ಕರಿಸದೇ ಹೋದರೆ ಕೆಟ್ಟ ದಿನ ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಸ್ವತಂತ್ರವಾಗಿ ಅಧಿಕಾರ ಮಾಡಲು ಅವಕಾಶ ಮಾಡಿಕೊಟ್ಟರೆ, ಉಚಿತ ಶಿಕ್ಷಣ, ಆರೋಗ್ಯ, ಉದ್ಯೋಗ ನೀಡಲು ಐದು ವರ್ಷದಲ್ಲಿ ಸಂಕಲ್ಪ ಮಾಡುತ್ತೇನೆ. ಒಂದು ವೇಳೆ ಐದು ವರ್ಷದಲ್ಲಿ ಕಾರ್ಯಕ್ರಮ ಮಾಡದಿದ್ದರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಮತ್ತೆ ಘೋಷಣೆ ಮಾಡಿದರು.
ಮಾಜಿ ಪ್ರಧಾನಿಗಳಾಷದ ಹೆಚ್.ಡಿ.ದೇವೇಗೌಡರು ಸಮಾವೇಶದಲ್ಲಿ ಉಪಸ್ಥಿತರಿದ್ದರು. ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ದಾಸರಹಳ್ಳಿ ಶಾಸಕ ಮಂಜುನಾಥ್‌ ಅವರು ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯರಾದ ಟಿ.ಎ.ಶರವಣ, ಭೋಜೇಗೌಡ,‌ ಕೆ.ಎನ್.ತಿಪ್ಪೇಸ್ವಾಮಿ, ಜೆಡಿಎಸ್ ನಗರಾಧ್ಯಕ್ಷ ಆರ್.‌ಪ್ರಕಾಶ್‌ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿದರು.
ನವೀನ ಹಳೆಯದು

نموذج الاتصال