*ಧಾರವಾಡ ಇಂಡಿಯನ್ ಓವರಸೀಸ್ ಬ್ಯಾಂಕ್ ಸಪ್ತಾಪುರ ಶಾಖೆ*
*ಎ.ಟಿ.ಎಂ ನಿರಾಕರಿಸಿದ 500 ರೂ.ಗಳನ್ನು ನೀಡದ ಬ್ಯಾಂಕಿಗೆ ದಂಡ, ಖರ್ಚು, ಬಡ್ಡಿ ಸೇರಿ ಗ್ರಾಹಕನಿಗೆ ರೂ.1,02,700 ಗಳ ಪರಿಹಾರ ನೀಡಲು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು ಆದೇಶ*
*ಧಾರವಾಡ(ಕರ್ನಾಟಕ ವಾರ್ತೆ)ಅ.14*: ಧಾರವಾಡ ಸಪ್ತಾಪುರದ ಇಂಡಿಯನ್ ಓವರಸೀಸ್ ಬ್ಯಾಂಕಿನ ಶಾಖೆಯ ಗ್ರಾಹಕರಾದ ವಕೀಲ ಸಿದ್ದೇಶ ಹೆಬ್ಬಳ್ಳಿ ಅವರು ನವೆಂಬರ್ 28, 2020 ರಂದು ತಮ್ಮ ಎ.ಟಿ.ಎಂ ಕಾರ್ಡನಿಂದ ರೂ.500 ಹಣ ತಗೆಯಲು ಪ್ರಯತ್ನಿಸಿದಾಗ ತನ್ನ ಉಳಿತಾಯ ಖಾತೆಗೆ ಡೆಬಿಟ್ ಆದರೂ ತನಗೆ ಆ ಹಣ ಬರದ ಕಾರಣ, ಮತ್ತೊಮ್ಮೆ ಪಕ್ಕದ ಎ.ಟಿ.ಎಂ ಮಶೀನಿನಿಂದ ಕಾರ್ಡಹಾಕಿ ರೂ.500 ಪಡೆದಿದ್ದರು.
ಇಂಡಿಯನ್ ಓವರಸೀಸ್ ಬ್ಯಾಂಕಿನ ಎಟಿಎಂ ಕಾರ್ಡ್ನಿಂದ ಮೊದಲನೆ ಸಲ ತೆಗೆದ ರೂ.500 ತನಗೆ ಬಂದಿಲ್ಲವಾದರೂ ತನ್ನ ಖಾತೆಯಿಂದ ರೂ.500 ಡೆಬಿಟ್ ಆಗಿರುವ ಕುರಿತು ಡಿಸೆಂಬರ್ 02, 2020 ರಂದು ತನ್ನ ಖಾತೆಯಿರುವ ಇಂಡಿಯನ್ ಓವರಸೀಸ್ ಬ್ಯಾಂಕಿನ ಶಾಖಾ ವ್ಯವಸ್ತಾಪಕರಿಗೆ ದೂರು ಕೊಟ್ಟಿದ್ದರು. ಆದರೆ ಸಿದ್ದೇಶ ಹೆಬ್ಬಳ್ಳಿ ಅವರು ನೀಡಿದ ದೂರು ಕುರಿತು ಶಾಖಾ ವ್ಯವಸ್ಥಾಪಕರು ಯಾವುದೇ ಕ್ರಮ ಕೈಗೋಳ್ಳದೇ ಇದ್ದರಿಂದ, ಅವರು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಬ್ಯಾಂಕಿನವರ ಮೇಲೆ ಕ್ರಮ ಕೈಗೊಳ್ಳುವಂತೆ ಧಾರವಾಡದ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಆಯೋಗದ ಅಧ್ಯಕ್ಷ ಈಶಪ್ಪ ಕ.ಭೂತೆ ಹಾಗೂ ಸದಸ್ಯರಾದ ವಿ.ಎ.ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಅವರು ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿ, ಎ.ಟಿಎಂ. ಹಣ ನಿರಾಕರಣೆಯ ಪ್ರಸಂಗಗಳಲ್ಲಿ ಗ್ರಾಹಕರ ಖಾತೆ ಹೊಂದಿದ ಬ್ಯಾಂಕಿನವರು ಹಣ ನಿರಾಕರಣೆಯ ದಿನಾಂಕದಿಂದ 6 ದಿನದ ಒಳಗಾಗಿ ನಿರಾಕರಿಸಿದ ಹಣವನ್ನು ಅವರ ಖಾತೆಗೆ ಜಮಾ ಮಾಡಬೇಕು. ತಪ್ಪಿದಲ್ಲಿ 6 ದಿವಸದ ನಂತರ ದಿನ ಒಂದಕ್ಕೆ ರೂ.100 ರಂತೆ ವಿಳಂಬದ ಅವಧಿಗೆ ಗ್ರಾಹಕರಿಗೆ ಪರಿಹಾರ ಕೊಡಬೇಕು ಎಂದು ರಿಜರ್ವ ಬ್ಯಾಂಕಿನ ನಿರ್ದೇಶನವಿದ್ದರೂ ಅದನ್ನು ಪಾಲಿಸದೆ ಧಾರವಾಡದ ಸಪ್ತಾಪುರದ ಇಂಡಿಯನ್ ಓವರಸೀಸ್ ಬ್ಯಾಂಕಿನ ಶಾಖಾ ವ್ಯವಸ್ತಾಪಕರು ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆಂದು ತೀರ್ಪು ನೀಡಿದ್ದಾರೆ.
ಈ ಅವಧಿಯಲ್ಲಿ ಕೆಲಸ ಮಾಡುತ್ತಿದ್ದ ಶಾಖಾ ವ್ಯವಸ್ತಾಪಕರು ಹಾಗೂ ಆಡಳಿತದ ಉಸ್ತುವಾರಿದಾರರು ಸಾರ್ವಜನಿಕರ ಟ್ರಸ್ಟಿಗಳಾಗಬೇಕಾಗಿದ್ದರವರು ಕರ್ತವ್ಯಲೋಪ ಮಾಡಿ ಸೇವಾ ನ್ಯೂನ್ಯತೆ ಎಸಗಿ ಸಾರ್ವಜನಿಕರ ಸ್ವತ್ತಾದ ಬ್ಯಾಂಕಿನ ಹಣದಿಂದ ಲಕ್ಷಗಟ್ಟಲೆ ಹಣವನ್ನು ದೂರುದಾರರಿಗೆ ಪರಿಹಾರ ಹಾಗೂ ದಂಡದ ರೂಪದಲ್ಲಿ ಕೊಡಬೇಕಾದುದು ವಿಪರ್ಯಾಸವೆಂದು ಆಯೋಗ ತನ್ನ ತೀರ್ಪಿನಲ್ಲಿ ಹೇಳಿ ತಪ್ಪು ಮಾಡಿದ ಬ್ಯಾಂಕ ಸಿಬ್ಬಂದಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಆ ಬ್ಯಾಂಕಿನ ಮೇಲಾಧಿಕಾರಿಗಳಿಗೆ ನಿರ್ದೇಶಿಸಿದೆ.
ದೂರುದಾರರಿಗೆ ನಿರಾಕರಣೆಯ ರೂ.500 ಗಳು ಮತ್ತು ಅದಕ್ಕೆ ನವೆಂಬರ್ 28, 2020 ರಿಂದ ಶೇ.8 ರಂತೆ ಬಡ್ಡಿಯ ಜೊತೆ, ರಿಜರ್ವ ಬ್ಯಾಂಕಿನ ಸುತ್ತೋಲೆಯಂತೆ ದಿನಕ್ಕೆ ರೂ.100 ರಂತೆ 677 ದಿವಸಗಳ ವಿಳಂಬಕ್ಕೆ ರೂ.67,700 ಪರಿಹಾರ ಹಾಗೂ ಸೇವಾ ನ್ಯೂನ್ಯತೆ ಎಸಗಿದ್ದಕ್ಕಾಗಿ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ 25 ಸಾವಿರ ಪರಿಹಾರ ಹಾಗೂ 10 ಸಾವಿರ ಪ್ರಕರಣದ ಖರ್ಚು ವೆಚ್ಚ ಸೇರಿ ರೂ 1,02,700 ನೀಡಬೇಕೆಂದು ಮತ್ತು ಈ ತೀರ್ಪು ನೀಡಿದ 30 ದಿನದೊಳಗಾಗಿ ಸಂಬಂಧಿಸಿದ ಗ್ರಾಹಕರಿಗೆ ನೀಡಲು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ತೀರ್ಪು ಪ್ರಕಟಿಸಿರುವ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಅವರು ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ರಿಜರ್ವ್ ಬ್ಯಾಂಕಿನ ನಿಯಮಗಳನ್ನು ಮತ್ತು ತಮ್ಮ ಬ್ಯಾಂಕಿನ ನಿಯಮಗಳನ್ನು ಸಹವಿವರವಾಗಿ ತಿಳಿಸಬೇಕು. ರಿಜರ್ವ್ ಬ್ಯಾಂಕ್ ಗ್ರಾಹಕರಿಗೆ ನೀಡಿರುವ ಸವಲತ್ತು ಮತ್ತು ಅನುಕೂಲತೆಗಳನ್ನು ಗ್ರಾಹಕರಿಗೆ ಪ್ರಚುರಪಡಿಸಲು ಸ್ಥಳೀಯ ಭಾಷೆಯಲ್ಲಿ ತಮ್ಮ ಬ್ಯಾಂಕ್ ವ್ಯಾಪ್ತಿಯಲ್ಲಿ ಪ್ರಚಾರ ಫಲಕಗಳನ್ನು ಅಳವಡಿಸಬೇಕು. ಆರ್ಥಿಕ ವ್ಯವಹಾರದ ಕುರಿತು ಎಲ್ಲ ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಆರ್ಥಿಕ ಸಾಕ್ಷರತೆ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
**************