ಸಮೃದ್ಧ ಸಾಹಿತ್ಯದ ಪ್ರಕಾಶಮಾನ ಬೆಳಕು : ಡಾ. ಪ್ರಕಾಶ ಖಾಡೆ ಅರವತ್ತರ ಸಂಭ್ರಮ.

ಸಮೃದ್ಧ ಸಾಹಿತ್ಯದ ಪ್ರಕಾಶಮಾನ ಬೆಳಕು : ಡಾ. ಪ್ರಕಾಶ ಖಾಡೆ ಅರವತ್ತರ ಸಂಭ್ರಮ. (ಜೂನ 30 ರಂದು ವೃತ್ತಿಯಿಂದ ನಿವೃತ್ತರಾಗಲಿದ್ದಾರೆ)         
   ಬಾಗಲಕೋಟೆ 09 :
ಬಾಗಲಕೋಟೆ 09-ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ನಿರಂತರವಾಗಿ ಬರೆದುಕೊಂಡು ಬಂದು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಬಾಗಲಕೋಟೆಯ ಡಾ.ಪ್ರಕಾಶ ಗಣಪತಿ ಖಾಡೆ ಅವರಿಗೆ ಈಗ ಅರವತ್ತು. 10 ಜೂನ 1965 ರಂದು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ತಂದೆ ಗಣಪತಿ ಖಾಡೆ, ತಾಯಿ ಗಂಗೂಬಾಯಿ ಅವರ ಉದರದಲ್ಲಿ ಜನಿಸಿ ಬಂದ ಅಪ್ಪಟ ಗ್ರಾಮೀಣ ಪ್ರತಿಭೆ ಪ್ರಕಾಶರು. ವಿದ್ಯಾರ್ಥಿದೆಸೆಯಲ್ಲಿಯೇ 1986 ರಲ್ಲಿ ಗೀತ ಚಿಗಿತ ಸಂಪಾದಿತ ಕವನ ಸಂಕಲನದಿಂದ ಇತ್ತೀಚಿನ ‘ಬಾಳುಕುನ ಪುರಾಣ’ ಕಥಾ ಸಂಕಲನದವರೆಗೆ ಈ ವರೆಗೆ ಬರೆದುಕೊಂಡು ಬಂದೆದೆಲ್ಲಾ ಸಮೃದ್ಧ ಸಾಹಿತ್ಯ. ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಅವರು ಹೇಳುವಂತೆ ‘ಖಾಡೆ ದಣಿವರಿಯದೆ ಬರೆಯುತ್ತಿರುವ ಅವಿಶ್ರಾಂತ ಬರಹಗಾರ. ಈ ಕೆಟೆಗರಿಯ ಲೇಖಕರನ್ನು ಫ್ರಾಲಿಫಿಕ್ ಅಥವಾ ಸಮೃದ್ಧ ಬರಹಗಾರ ಅನ್ನಬಹುದು’ ಎಂದಿದ್ದಾರೆ. ಕಾವ್ಯ, ಕಥೆ, ನಾಟಕ, ಜೀವನಚರಿತ್ರೆ, ಸಂಶೋಧನೆ, ಸಂಪಾದನೆ, ಜಾನಪದ ಹಾಗೂ ವಿಮರ್ಶೆಗಳು ಸೇರಿದಂತೆ 51 ಕೃತಿಗಳನ್ನುಡಾ.ಖಾಡೆ  ರಚಿಸಿದ್ದಾರೆ. ಪ್ರೀತಿ ಬಟ್ಟಲು, ಕೃಷ್ಣಾ ತೀರದ ಜನಪದ ಒಗಟುಗಳು, ನೆಲಮೂಲ ಸಂಸ್ಕೃತಿ, ಜಾನಪದ ಲೋಕ, ಜನಪದ ಕೋಗಿಲೆ ಚಲವಾದಿ ಗೌರಮ್ಮ, ಮೌನ ಓದಿನ ಬೆಡಗು, ಜಾನಪದ ಹೆಬ್ಬಾಗಿಲು, ಸಾಹಿತ್ಯ ಸಂಗತಿ, ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ, ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ. ಶಾಂತಿ ಬೀಜಗಳ ಜತನ, ಕೊರೊನಾ ಕಾಲದ ಕವಿತೆಗಳು, ಬೇಂದ್ರೆ ಕಾವ್ಯದ ದೇಸಿಯತೆ, ಬಾಗಲಕೋಟೆ ಹೋಳಿ, ಕಾವ್ಯ ನಾದದ ಧ್ಯಾನ, ಚೆಲುವಿ ಚಂದ್ರಿ, ಬಾಳುಕುನ ಪುರಾಣ ಕಥಾ ಸಂಕಲನ ಮುಂತಾದವು ಪ್ರಕಾಶ ಖಾಡೆ ಅವರ ಪ್ರಕಟಿತ ಕೃತಿಗಳು. ಬಿಡುವಿಲ್ಲದೇ ಬರೆಯುವ ಇವರಿಗೆ ನಾಡಿನ ಮೂಲೆ ಮೂಲೆಗಳಿಂದ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ದಣ ಕಾವ್ಯ ಪ್ರಶಸ್ತಿ, ಸಿಂದಗಿಯ ಕಡಣಿ ಮತ್ತು ಬೇಂದ್ರೆ ಸಾಹಿತ್ಯ ಪ್ರಶಸ್ತಿ, ಹುಬ್ಬಳ್ಳಿಯ ಬೊಮ್ಮಾಯಿ ಪ್ರತಿಷ್ಠಾನ ಪ್ರಶಸ್ತಿ, ಆಜೂರ ಪ್ರತಿಷ್ಠಾನ ಪ್ರಶಸ್ತಿ, ಬೀಳಗಿ, ಸಮೀರವಾಡಿ. ಅರಕೇರಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ ಹರಿಹರಶ್ರೀ ಸಾಹಿತ್ಯ ಪ್ರಶಸ್ತಿ, ವಿಜಯಪುರ ಪುಸ್ತಕ ಪರಿಷತ್ತು ಪ್ರಶಸ್ತಿ, ಮುಂಬಯಿಯ ಮೊಗವೀರ ಕಥಾ ಪ್ರಶಸ್ತಿ ಹಾಗೂ ಸಂಕ್ರಮಣ ಸಾಹಿತ್ಯ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳು ಪ್ರಸಾರವಾಗಿವೆ.
 ಬೆಂಗಳೂರದಲ್ಲಿ ಜೂನ 2023 ರಲ್ಲಿ ಜರುಗಿದ ರಾಜ್ಯ ಮಟ್ಟದ ಮೇಘಮೈತ್ರಿ 6 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ವಿಜಯಪುದಲ್ಲಿ 01 ಡಿಸೆಂಬರ 2024 ರಲ್ಲಿ ಜರುಗಿದ ರಾಜ್ಯಮಟ್ಟದ ಪುಸ್ತಕ ಪರಿಷತ್ತು ಸಮ್ಮೇಳನಾಧ್ಯಕ್ಷರಾಗಿದ್ದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಸೇರಿದಂತೆ ಮೈಸೂರು ದಸರಾ ಕವಿಗೋಷ್ಟಿ, ಚಾಲುಕ್ಯ ಉತ್ಸವ, ನವರಸಪುರ ಉತ್ಸವ, ಹಂಪಿ ಉತ್ಸವ, ಕಿತ್ತೂರು ಮೊದಲಾದ ಉತ್ಸವಗಳ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ. ನಾಡಿನ ಗಣ್ಯ ಪತ್ರಿಕೆಗಳಲ್ಲಿ ಕಥೆ, ಕವಿತೆ, ವಿಮರ್ಶೆ ಮತ್ತು ಅಪಾರ ಲೇಖನಗಳು ಪ್ರಕಟವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಉಪನ್ಯಾಸಗಳು ಪ್ರಸಾರವಾಗಿವೆ. ಇವರ ಲೇಖನಗಳು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,ವಿಜಯಪುರದ ಮಹಿಳಾ ವಿಶ್ವ ವಿದ್ಯಾಲಯ ಹಾಗೂ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯಗಳ ಪದವಿ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಗಳಾಗಿವೆ. ಕೊವಿಡ್-19 ಕೊರೊನಾ ಕಾಲ ಘಟ್ಟದ ಲಾಕ್ ಡೌನ್ ವೇಳೆಯಲ್ಲಿ ಪ್ರತಿ ದಿವಸ ಮನೆಯಲ್ಲಿದ್ದುಕೊಂಡೆ "ದೇಸಿ:ಕನ್ನಡದ ಅನನ್ಯತೆ’ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಐವತ್ತಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. "ಬೆಳಕಾಯಿತು ಬಾಗಲಕೋಟೆ' ಹೆಸರಿನಲ್ಲಿ ಫೇಸ್‌ಬುಕ್ಕ್ ಲೈವ್ ದಲ್ಲಿ ನಾಡಿನ ವಿದ್ವಾಂಸರಿಂದ ಅವಿಭಜಿತ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಸಾಧಕರನ್ನು ಕುರಿತು 143 ಹೆಚ್ಚು ಸರಣಿ ಉಪನ್ಯಾಸಗಳು ಪ್ರಸಾರವಾಗಿವೆ. ಇವರ ಕೂಡಿ ಕಟ್ಟಿದ ಕನ್ನಡ, ಒಲುಮೆ ಹಾಡಿಗೆ ಗೀತೆಗಳು  ಯುಟ್ಯೂಬ್ ಮೂಲಕ ಜಗದೆಲ್ಲೆಡೆ ಜನಪ್ರಿಯವಾಗಿವೆ. ಅಧ್ಯಾಪಕರಾಗಿ ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೇ ಜೂನ 30 ರಂದು ವೃತ್ತಿಯಿಂದ ನಿವೃತ್ತರಾಗಲಿದ್ದಾರೆ. ಪ್ರಕಾಶ ಖಾಡೆ ಅವರ ಪತ್ನಿ ಅನ್ನಪೂರ್ಣ, ಮಕ್ಕಳಾದ ಉಮಾ,ಪ್ರತಿಮಾ,ಅಭಿನವ ಸೊಸೆ ದಿವ್ಯಾ ಅಳಿಯಂದಿರಾದ ಪ್ರವೀಣ, ಪವನ ಹಾಗೂ ಮೊಮ್ಮಗಳು ಶ್ರೀಜಾ ಇವರದು ತುಂಬು ಕುಟುಂಬ.
ನವೀನ ಹಳೆಯದು

نموذج الاتصال